deshadoothanews

ವನಮಹೋತ್ಸವ-2023ಕ್ಕೆ ಜುಲೈ 1ರಂದು ಚಾಲನೆ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ :
 2023ರ ಜುಲೈ 1ರಿಂದ 2024ರ ಜೂನ್ 30ರವರೆಗೆ 5 ಕೋಟಿ ಸಸಿ ನೆಟ್ಟು ಪೋಷಿಸುವ ಸಂಕಲ್ಪದ ಹಾಗೂ ಮುಂದಿನ 5 ವರ್ಷಗಳಲ್ಲಿ 25 ಕೋಟಿ ಸಸಿ ನೆಟ್ಟು ಪೋಷಿಸುವ ನಿರ್ಣಯದ ಮಹತ್ವದ ವನಮಹೋತ್ಸವ-2023 ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಇನ್ನೀತರ ಎಲ್ಲಾ ಜನಪ್ರತಿನಿಧಿಗಳು ಜುಲೈ 1ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಸಿ ನೆಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಿದ್ದಾರೆ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ ಅವರು ತಿಳಿಸಿದ್ದಾರೆ.
ನನ್ನ ಗಿಡ ನನ್ನ ಹೆಮ್ಮೆ ಎನ್ನುವ ಶೀರ್ಷಿಕೆಯಡಿ ಸಸಿ ನೆಡುವ ಸಪ್ತಾಹವನ್ನು ಜುಲೈ 1ರಿಂದ ಜುಲೈ 7ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಸಪ್ತಾಹದಡಿ 1 ಕೋಟಿ ಸಸಿ ನೆಡಲಾಗುತ್ತದೆ. ‘ನಾನು ಸಸಿ ನೆಟ್ಟಿದ್ದೇನೆ.. ಬನ್ನಿ ಕರುನಾಡನ್ನು ಸಸ್ಯ ಕಾಶಿ ಮಾಡೋಣ’. ‘5 ಕೋಟಿ ಸಸಿ ನೆಡೋಣ ಕರ್ನಾಟಕದಲ್ಲಿ ಹಸಿರು ಹೊದಿಕೆಯ ಕ್ರಾಂತಿ ಮಾಡೋಣ’ ಎನ್ನುವ ಆಶಯದಡಿ ರಾಜ್ಯಾದ್ಯಂತ ನಡೆಯುವಂತೆ ಕೊಪ್ಪಳ ಜಿಲ್ಲೆಯಲ್ಲಿ ಸಹ ಜುಲೈ 1ರಿಂದ ಜುಲೈ 7ರವರೆಗೆ ನಡೆಯಲಿರುವ ವನಮಹೋತ್ಸವ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
*ಸಾರ್ವಜನಿಕರಲ್ಲಿ ಮನವಿ:*
ಸಾರ್ವಜನಿಕರು ಹತ್ತಿರದ ಅರಣ್ಯ ಇಲಾಖೆಗೆ ಭೇಟಿ ನೀಡಿ ವನಮಹೋತ್ಸವ ಅಭಿಯಾನದಲ್ಲಿ ಭಾಗಿಯಾಗಬೇಕು. ಹತ್ತಿರದ ಅರಣ್ಯ ಇಲಾಖೆಯ ನರ್ಸರಿಗೆ ಹೋಗಿ ಸಸಿ ಪಡೆದು ನೆಟ್ಟು ಬೆಳೆಸಬೇಕು. ನಿಮ್ಮ ನಿಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಕರುನಾಡನ್ನು ಸಸ್ಯಕಾಶಿ ಮಾಡುವ ಸಂದೇಶ ಸಾರಬೇಕು ಎಂದು ಅವರು ಕೊಪ್ಪಳ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Leave A Reply

Your email address will not be published.