deshadoothanews

*ಸಾರ್ವಜನಿಕರಿಗೆ ಅಗತ್ಯವಾದ ಶುದ್ಧ ನೀರು ಒದಗಿಸಿ, ಸ್ವಚ್ಛತೆಗೆ ಆದ್ಯತೆ ನೀಡಿ: ಸಂತೋಷ ಪಾಟೀಲ್ ಬಿರಾದಾರ್* 

ಡಿ ಡಿ ನ್ಯೂಸ್ ಕೊಪ್ಪಳ

0

ಡಿ ಡಿ ನ್ಯೂಸ್. ಯಲಬುರ್ಗಾ : ವಾಂತಿ ಬೇದಿ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾ.ಪಂ ಪಿಡಿಒ, ವಿಎ ಹಾಗೂ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಅಗತ್ಯವಾದ ಶುದ್ಧ ಕುಡಿಯುವ ನೀರು ಒದಗಿಸಿ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಯಲಬುರ್ಗಾ ತಾಲೂಕು ಪಂಚಾಯತಿ *ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೊಷ ಪಾಟೀಲ್ ಬಿರಾದಾರ್* ಹೇಳಿದರು.

ಯಲಬುರ್ಗಾ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ಇಂದು ಹಮ್ಮಿಕೊಂಡಿದ್ದ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ತಾಲೂಕು ಮಟ್ಟದಲ್ಲಿ ಗೂಗಲ್ ಮೀಟ್ ಮೂಲಕ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕೊಪ್ಪಳರವರು ಜಂಟಿ ಸಭೆಯಲ್ಲಿ ತಿಳಿಸಿದಂತೆ, ಬೇಸಿಗೆ ತಾಪಮಾನ ಹಾಗೂ ಹವಾಮಾನ ವೈಪರಿತ್ಯಗಳಿಂದ ಕಾಲರಾ, ವಾಂತಿ ಬೇಧಿಯಂತಹ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಕಂಡು ಬಂದಿರುವುದರಿಂದ ಸದರಿ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ತಾಲೂಕಿನ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳು ಕ್ರಮವಹಿಸಿ ನಿಯಂತ್ರಿಸಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಪಿಡಿಒರವರು, ಗ್ರಾಮ ಆಡಳಿತ ಅಧಿಕಾರಿಗಳು, ಕುಡಿಯುವ ನೀರು ಸಿಬ್ಬಂದಿಯವರು ಸೇರಿ ನೀರಿನ ಗುಣಮಟ್ಟ ಪರೀಕ್ಷೆ ಮಾಡಬೇಕು. ಬೋರ್ವೆಲ್ ನೀರು, ಡಿಬಿಒಟಿ ನೀರು ಹಾಗೂ ಆರ್ ಒ ಪ್ಲಾಂಟ್ ನೀರುಗಳನ್ನು ಗುಣಮಟ್ಟ ಪರಿಶೀಲನೆ ಮಾಡಿ ಎರಡು ದಿನಗಳ ಒಳಗಾಗಿ ತಾಲೂಕು ಪಂಚಾಯತಿಗೆ ವರದಿ ಸಲ್ಲಿಸಬೇಕು ಎಂದು ಹೇಳಿದರು.

*ಯಲಬುರ್ಗಾ ತಹಶೀಲ್ದಾರರಾದ ವಿಠಲ್ ಚೌಗಲೆ* ಮಾತನಾಡಿ , ತಾಲೂಕಿನಲ್ಲಿ ವಾಂತಿ ಬೇದಿ ಪ್ರಕರಣ, ಸಾಂಕ್ರಾಮಿಕ ರೋಗಗಳು ಹರಡುತ್ತಿರುವುದರಿಂದ ನಾವೆಲ್ಲರೂ ತಾಲೂಕ ಮತ್ತು ಗ್ರಾಮ ಪಂಚಾಯತ ಮಟ್ಟದಲ್ಲಿ ರಚಿತಗೊಂಡ ಗ್ರಾಮ ನೈರ್ಮಲ್ಯ ಸಮಿತಿಗಳು ಜಾಗೃತಗೊಂಡು ಗ್ರಾಮ ಮಟ್ಟದಲ್ಲಿ ಎಲ್ಲಾ ನೌಕರ ವರ್ಗದ ಸಿಬ್ಬಂದಿ, ಇಲಾಖಾ ಅಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ವರ್ಗ ಹಾಗೂ ಪಿಡಿಒರವರು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಎಲ್ಲರೊಡಗೂಡಿ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ನಿರ್ವಹಣೆ ಮಾಡುವಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಂಡು ಯಾವುದೇ ರೀತಿಯ ರೋಗ ರೂಜಿನಗಳು ಹರಡದಂತೆ ಹಾಗೂ ನಿಯಂತ್ರಿಸುವಲ್ಲಿ ಎಲ್ಲಾ ಕಟ್ಟು ನಿಟ್ಟಿನ ಕ್ರಮಗಳನ್ನು ವಹಿಸುವಂತೆ ತಿಳಿಸಿದರು.

*ಯಲಬುರ್ಗಾ ತಾಲೂಕು ಆಸ್ಪತ್ರೆ ಆರೋಗ್ಯಾಧಿಕಾರಿಗಳಾದ ಡಾ.ಸುಮಾ ಎಸ್ ಪಾಟೀಲ್ ಮಾತನಾಡಿ* , ಯಲಬುರ್ಗಾ ಪಟ್ಟಣದಲ್ಲಿ ವಾಂತಿಬೇದಿ ಪ್ರಕರಣಗಳು ಬೆಳಕಿಗೆ ಬಂದಿದ್ದು, ತಲ್ಲೂರ ತಾಂಡಾದಲ್ಲಿ 36 ಕೇಸುಗಳು ವರದಿಯಾಗಿ ಸಂಪೂರ್ಣ ಚಿಕಿತ್ಸೆಯೊಂದಿಗೆ ಗುಣಮುಖರಾಗಿದ್ದಾರೆ. ಗೆದಗೇರಿ ತಾಂಡಾದಲ್ಲಿ 15 ಕೇಸುಗಳು ವರದಿಯಾಗಿದ್ದು, ಎಲ್ಲಾ ಗ್ರಾಮಗಳಿಗೆ ಮುಂಜಾಗೃತಿ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಎಲ್ಲ ಗ್ರಾಮ ಪಂಚಾಯತಿ ಪಿಡಿಒರವರಿಗೆ ದಿನನಿತ್ಯ ಚರಂಡಿ ಸ್ವಚ್ಛತೆ, ಬ್ಲಿಚಿಂಗ್ ಪೌಡರ್, ಸಿಂಪಡಿಸುವ ಬಗ್ಗೆ ಮಾಹಿತಿ ನೀಡಲಾಗಿದೆ. ಗ್ರಾ.ಪಂ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗದವರಿಗೆ ಕ್ಲೋರಿನೇಶನ್ ಕುರಿತು ಮಾರ್ಗದರ್ಶನ ನೀಡಲಾಗಿದೆ. ಕುಡಿಯುವ ನೀರಿನ ಮಾದರಿಗಳನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಕೊಪ್ಪಳ ಇವರಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಾಧಿಕಾರಿಗಳಿಗೆ ಹಾಗೂಕ್ಷೇತ್ರ ಸಿಬ್ಬಂದಿಗಳನ್ನು ವಾಂತಿ ಬೇದಿ ಪ್ರಕರಣಗಳು ಕಂಡುಬಂದ ಸ್ಥಳಕ್ಕೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.

ಸಾರ್ವಜನಿಕರು ಬಯಲು ಶೌಚಾಲಯಕ್ಕೆ ಹೋಗುವುದನ್ನು ನಿಲ್ಲಿಸಬೇಕು. ಕಡ್ಡಾಯವಾಗಿ ವೈಯಕ್ತಿಕ ಶೌಚಾಲಯ ಬಳಸಬೇಕು. ಪರಿಸ್ಥಿತಿ ಮೇರೆಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದೆ. ಯಲಬುರ್ಗಾ ತಾಲೂಕು ಆಸ್ಪತ್ರೆಯಲ್ಲಿಗುಣಮಟ್ಟದ ಆರೋಗ್ಯ ಸೇವೆಯನ್ನು ಕೊಡಲು ಪ್ರತ್ಯೇಕ ಜಿಇ ವಾರ್ಡ್ ಕಲ್ಪಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆಗಳ ಸರ್ವೆ ಮಾಡಿ ಆರೋಗ್ಯ ಶಿಕ್ಷಣ, ಕಾಯಿಸಿದ ಕುಡಿಯುವ ನೀರಿನ ಪ್ರಾಮುಖ್ಯತೆ ಶಿಕ್ಷಣ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಯಲಬುರ್ಗಾ ಇಂಜಿನಿಯರ್ ರಿಜ್ವಾನಾ ಬೇಗಂ, ಸಹಾಯಕ ನಿರ್ದೇಶಕರಾದ ಫಕಿರಪ್ಪ ಕಟ್ಟಿಮನಿ, ಎಲ್ಲ ಗ್ರಾ.ಪಂ ಪಿಡಿಒರವರು, ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.